• August 8, 2024
  • Tapas Saadhana
  • 0

2023: ಪ್ರತಿಭಾವಂತರಿಗೆ ಉನ್ನತಶಿಕ್ಷಣದ ಸೋಪಾನ, ರಾಷ್ಟ್ರೋತ್ಥಾನದ ‘ತಪಸ್ – ಸಾಧನಾ’


ತಪಸ್ – ಸಾಧನಾ: ಬಡ, ಪ್ರತಿಭಾವಂತ ಮಕ್ಕಳ ಉನ್ನತ ಶಿಕ್ಷಣದ ಆಶಾಕಿರಣ | Tapas – Saadhana in Kannada

ರಾಷ್ಟ್ರೋತ್ಥಾನ ಪರಿಷತ್:

ಜನಶಿಕ್ಷಣ, ಜನಜಾಗೃತಿ, ಜನಸೇವಾ ಎಂಬ ಪ್ರಮುಖ ಧ್ಯೇಯಗಳನ್ನಿಟ್ಟುಕೊಂಡು 1965ರಲ್ಲಿ ಪ್ರಾರಂಭವಾದ ರಾಷ್ಟ್ರೋತ್ಥಾನ ಪರಿಷತ್, ಸ್ವಸ್ಥ-ಸುಸ್ಥಿರ ಸಮಾಜನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕರ್ನಾಟಕದ ಪ್ರಮುಖ ಸೇವಾಸಂಸ್ಥೆಗಳಲ್ಲೊಂದು.

“ರಾಷ್ಟ್ರೋತ್ಥಾನವೆಂಬುದು ಕಲ್ಪವೃಕ್ಷ. ಯಾರು ಬೇಕಾದರೂ ಇಲ್ಲಿಂದ ಜ್ಞಾನವೆಂಬ ಫಲವನ್ನು ಸವಿಯಬಹುದು. ಆದರೆ ಅಂತಹ ಫಲವುಂಡವರ ಬದುಕು ಸಮಾಜಕ್ಕೆ ಅರ್ಪಿತವಾಗಬೇಕು” ಎಂದ ಮೋಹನ್ ಭಾಗವತರ ಮಹಾಸಂದೇಶ ರಾಷ್ಟ್ರೋತ್ಥಾನದ ನಾಡಿಮಿಡಿತ. ಇಂತಹ ಅಪೂರ್ವ ಸಂಸ್ಥೆ ಸಮಾಜಕ್ಕಾಗಿ ಕೈಗೊಂಡ ಕಾರ್ಯಗಳು ಹತ್ತು ಹಲವು.

 

ತಪಸ್ – ಸಾಧನಾ:

‘ಅರಿವೇ ಗುರು’ ಎಂಬ ನಾಣ್ಣುಡಿಯನ್ನು ಅಕ್ಷರಶಃ ಸಾಕಾರಗೊಳಿಸಲು ಮುಂದಡಿಯಿಟ್ಟಿರುವ ‘ತಪಸ್ ಮತ್ತು ಸಾಧನಾ’ ಶಿಕ್ಷಣ ಕ್ಷೇತ್ರದಲ್ಲೊಂದು ಮಹತ್ವದ ಹೆಜ್ಜೆ. ರಾಜಾಸ್ಥಾನದ ಕೋಟ ಸೂಪರ್ 30ಯ ಸ್ಪೂರ್ತಿಯೊಂದಿಗೆ ಪ್ರಾರಂಭವಾದ ತಪಸ್ – ಸಾಧನಾ, ಇಂದು ರಾಷ್ಟ್ರೋತ್ಥಾನದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ.

ಬಡತನ ಸಾಧನೆಗೆ ಅಡ್ಡಿಯಾಗಬಾರದು. ಆರ್ಥಿಕ ದೌರ್ಬಲ್ಯದಿಂದ ಯಾವ ಪ್ರತಿಭೆಗಳೂ ಕಮರಿ ಹೋಗಬಾರದು ಎಂಬ ಉದ್ದೇಶದಿಂದ ರಾಷ್ಟ್ರೋತ್ಥಾನ ಪರಿಷತ್ ಆರಂಭಿಸಿದ ತಪಸ್ ಹಾಗೂ ಸಾಧನಾ, ರಾಜ್ಯದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿದೆ. ಭಾರತೀಯರ ಬುದ್ಧಿವಂತಿಕೆಯನ್ನು ಜಗತ್ತು ಕುತೂಹಲದಿಂದ ನೋಡುತ್ತಿರುವಾಗ, ಸೂಕ್ತ ಮಾರ್ಗದರ್ಶನದ ಕೊರತೆ ಮತ್ತು ಆರ್ಥಿಕ ದುರ್ಬಲತೆ, ದೇಶದಲ್ಲಿ ಪ್ರತಿಭೆಗಳು ಹೊರಹೊಮ್ಮದಿರಲು ಕಾರಣವಾಗಬಾರದು. ಅಂತಹ ಸಮಸ್ಯೆಗಳನ್ನು ನಿವಾರಿಸಿ, ಕುಗ್ರಾಮಗಳಲ್ಲಿ ವಾಸಿಸುವ ಕಡುಬಡವನ ಮಗುವೂ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವಂತಾಗಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೋತ್ಥಾನ ಪರಿಷತ್ ಬಾಲಕರಿಗಾಗಿ ‘ತಪಸ್’ ಹಾಗೂ ಬಾಲಕಿಯರಿಗಾಗಿ ‘ಸಾಧನಾ’ ಎಂಬ ವಿಶಿಷ್ಟ ಯೋಜನೆಗಳನ್ನು ರೂಪಿಸಿದೆ.

 

ತಪಸ್‍:

2012ರಲ್ಲಿ ಪ್ರಾರಂಭವಾದ ‘ತಪಸ್’ ಯೋಜನೆ, ಆರ್ಥಿಕವಾಗಿ ಹಿಂದುಳಿದ, ರಾಜ್ಯದ ಪ್ರತಿಭಾವಂತ ಗಂಡು ಮಕ್ಕಳಿಗೆ ಉಚಿತ ಊಟ, ವಸತಿ ಸಹಿತ ಪಿಯುಸಿ ಶಿಕ್ಷಣದ ಜೊತೆಗೆ ಐಐಟಿ – ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದೆ. ಈ ಯೋಜನೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಕಾಲೇಜು ಶುಲ್ಕ, ಅಧ್ಯಯನ ಸಾಮಗ್ರಿ, ತರಬೇತಿ ಸೇರಿದಂತೆ 2 ವರ್ಷಗಳ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳ ಶ್ರೇಷ್ಠ ಗುಣಮಟ್ಟದ ಪಠ್ಯಗಳನ್ನು ಸಿದ್ಧಪಡಿಸಿ, ಅವುಗಳನ್ನು ಪರಿಣಾಮಕಾರಿಯಾಗಿ ಮಕ್ಕಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಷ್ಠಿತ ಬೇಸ್ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯವನ್ನು ಮಾಡಲಾಗುತ್ತಿದೆ. 2012 ರಿಂದ 2023ರ ಈ ಅವಧಿಯಲ್ಲಿ 10 ಬ್ಯಾಚ್‍ಗಳಾಗಿವೆ.

ವಿವಿಧ ಹಂತದ ಆಯ್ಕೆ ಪ್ರಕ್ರಿಯೆಗಳ ಮೂಲಕ, ಯಾವುದೇ ಜಾತಿ, ಧರ್ಮ, ಪ್ರದೇಶಗಳ ಭೇದವಿಲ್ಲದೇ, ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿ, ಗ್ರಹಣಶಕ್ತಿ, ಆಸಕ್ತಿ, ಬದ್ಧತೆ, ನಡವಳಿಕೆ, ಸಮಯದ ಸದುಪಯೋಗ ಮತ್ತು ಅಂಕಗಳ ಆಧಾರದ ಮೇಲೆ ಪ್ರತಿ ವರ್ಷ 40 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಕೊಳ್ಳಲಾಗುತ್ತದೆ.

‘ತಪಸ್’ನ ಪ್ರಯೋಜನ ಪಡೆದುಕೊಂಡ ನೂರಾರು ವಿದ್ಯಾರ್ಥಿಗಳು ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ತಮ್ಮ ವೃತ್ತಿಜೀವನಕ್ಕೆ ಕಾಲಿಟ್ಟಿದ್ದಾರೆ. ಶಿಕ್ಷಣದೊಂದಿಗೆ ಸಮಾಜದ ಸ್ವಾಸ್ಥ್ಯದ ಕನಸುಕಂಡ ರಾಷ್ಟ್ರೋತ್ಥಾನ ಪರಿಷತ್‍ನ ಈ ಮಹತ್ವಾಕಾಂಕ್ಷಿ ಯೋಜನೆ ವಿದ್ಯಾರ್ಥಿಗಳ ಜೀವನವನ್ನಷ್ಟೇ ಅಲ್ಲದೇ ಅವರ ಇಡೀ ಕುಟುಂಬದ ಚಿತ್ರಣವನ್ನೇ ಬದಲಾಯಿಸಿದೆ.

ಸಾಧನಾ:

ರಾಷ್ಟ್ರೋತ್ಥಾನ ಪರಿಷತ್ ರಾಜ್ಯದ ಬಡ ಹೆಣ್ಣುಮಕ್ಕಳ ಕಷ್ಟವನ್ನು ಅರಿತು, ಅವರನ್ನೂ ಸಾಧನೆಯ ಪಥಕ್ಕೆ ತಂದುನಿಲ್ಲಿಸುವ ಉದ್ದೇಶದಿಂದ ‘ಸಾಧನಾ’ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿಭೆಯಿದ್ದರೂ ತಮ್ಮ ಹೆಣ್ಣು ಮಗುವಿಗೆ ಉನ್ನತ ಶಿಕ್ಷಣವನ್ನು ಕೊಡಿಸಲಾಗದೇ, ಆರ್ಥಿಕವಾಗಿ ಹಿಂದುಳಿದ ಅವೆಷ್ಟೋ ಪಾಲಕರು ಮಕ್ಕಳ ಮದುವೆ ಮಾಡಿಬಿಡುವ ಉದಾಹರಣೆಗಳನ್ನು ನೋಡುತ್ತೇವೆ. ಅಂತಹ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಿ ಬದುಕಬೇಕು, ಬಡತನದ ಕಾರಣದಿಂದ ಅವರ ಪ್ರತಿಭೆಗಳು ಕಮರಿಹೋಗಬಾರದು ಎಂಬ ಧ್ಯೇಯವನ್ನಿಟ್ಟುಕೊಂಡು 2017-18ರ ಶೈಕ್ಷಣಿಕ ವರ್ಷದಿಂದ ರಾಷ್ಟ್ರೋತ್ಥಾನ ಪರಿಷತ್ ‘ಸಾಧನಾ’ ಯೋಜನೆಯನ್ನು ಆರಂಭಿಸಿದೆ.

ಬಾಲಕರಿಗಾಗಿ ಇರುವ ತಪಸ್‍ನಂತೆಯೇ ನಡೆಯುವ ಈ ಯೋಜನೆಯಲ್ಲಿ, ಆಯ್ಕೆಯಾದ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಬೆಂಗಳೂರಿನ ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನಲ್ಲಿ ಎರಡು ವರ್ಷಗಳ ಪಿಯುಸಿ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡುವುದರೊಂದಿಗೆ ಎನ್ಇಇಟಿ ಹಾಗೂ ಸಿಇಟಿ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಇದರ ಜೊತೆಗೆ ಶಿಕ್ಷಕರಾಗಬೇಕೆಂಬ ಕನಸು ಹೊತ್ತ ವಿದ್ಯಾರ್ಥಿನಿಯರಿಗೆ ಒಟ್ಟು ಆರು ವರ್ಷಗಳ ಪಿಯುಸಿ, ಬಿಎಸ್‍ಸಿ ಮತ್ತು ಇಂಟಿಗ್ರೇಟೆಡ್ ಬಿಎಡ್ ಶಿಕ್ಷಣವನ್ನು ನೀಡಲಾಗುತ್ತದೆ. ‘ಸಾಧನಾ’ ಯೋಜನೆಯ ಪ್ರಯೋಜನ ಪಡೆದ ಅನೇಕ ವಿದ್ಯಾರ್ಥಿನಿಯರು ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಹಲವರು ಕೃಷಿ, ತಾಂತ್ರಿಕ, ಫಾರ್ಮಸಿ ಮತ್ತು ಬಯೋ ಇನ್‍ಫರ್ಮೇಷನ್ ಮುಂತಾದ ವಿಷಯಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.

ವಿವಿಧ ಹಂತದ ಆಯ್ಕೆ ಪ್ರಕ್ರಿಯೆಗಳ ಮೂಲಕ, ಯಾವುದೇ ಜಾತಿ, ಧರ್ಮ, ಪ್ರದೇಶಗಳ ಭೇದವಿಲ್ಲದೇ, ವಿದ್ಯಾರ್ಥಿನಿಯರ ಆರ್ಥಿಕ ಪರಿಸ್ಥಿತಿ, ಗ್ರಹಣಶಕ್ತಿ, ಆಸಕ್ತಿ, ಬದ್ಧತೆ, ನಡವಳಿಕೆ, ಸಮಯದ ಸದುಪಯೋಗ ಮತ್ತು ಅಂಕಗಳ ಆಧಾರದ ಮೇಲೆ ಪ್ರತಿ ವರ್ಷ 90 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಕೊಳ್ಳಲಾಗುತ್ತದೆ.

ತಪಸ್ – ಸಾಧನಾದ ಸಾಧನೆಗಳು:

  • ತಪಸ್: ಕಳೆದ 10 ವರ್ಷದಲ್ಲಿ 366 ಮಕ್ಕಳಿಗೆ ಉಚಿತ ಶಿಕ್ಷಣ, 36 ಐಐಟಿ ಪ್ರವೇಶ, 92 ಎನ್‍ಐಟಿ ಸೀಟು
  • ಎನ್‍.ಐ.ಟಿ.ಕೆ. – ಸುರತ್ಕಲ್‍ಗೆ ಹಿಂಡುಹಿಂಡಾಗಿ ತೆರಳುವ ತಪಸ್‍ ಮಕ್ಕಳು, ಶಿಸ್ತು, ಸಂಸ್ಕಾರಗಳ ವಿಷಯದಲ್ಲಿ ತಮ್ಮದೇ ಪ್ರತ್ಯೇಕ ಐಡೆಂಟಿಟಿ ಗಳಿಸಿದ್ದಾರೆ. ಸದ್ಯ, 30-40 ತಪಸ್‍ ಮಕ್ಕಳು ಎನ್‍.ಐ.ಟಿ.ಕೆ.ಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾರೆ.
  • ಸಾಧನಾ: ಕಳೆದ 5 ವರ್ಷದಲ್ಲಿ 246 ಮಕ್ಕಳಿಗೆ ಉಚಿತ ಶಿಕ್ಷಣ, 58 ಎಂಬಿಬಿಎಸ್ ಮೆರಿಟ್ ಸೀಟು
  • ಕಳೆದ ಸಾಲಿನಲ್ಲಿ ಸಾಧನಾದ 5ನೇ ಬ್ಯಾಚಿನ ರಿತ್ವಿಜಾ ದೇವೇಗೌಡ (ಮಂಡ್ಯ) ಪುಣೆಯ ಎ.ಎಫ್.ಎಂ.ಸಿ.ಯಲ್ಲಿ (ಆರ್ಮ್ಡ್ ಫೋರ್ಸಸ್ ಮೆಡಿಕಲ್ ಕಾಲೇಜು) ಸೀಟು ಪಡೆದ ಕರ್ನಾಟಕದ ಏಕೈಕ ವಿದ್ಯಾರ್ಥಿನಿ.
  • ರೈತ, ನೇಕಾರ, ಸೆಕ್ಯುರಿಟಿ, ಎಲೆಕ್ಟ್ರಿಷಿಯನ್, ಡ್ರೈವರ್, ಟೈಲರ್, ಕೇಟರರ್, ಕಂಡಕ್ಟರ್, ಕೂಲಿ, ಹೂವಿನ ವ್ಯಾಪಾರಿ, ಬಡಗಿ, ಮಾಲಿ, ಸ್ವ-ಉದ್ಯೋಗ, ಗುಮಾಸ್ತ, ದಿನಗೂಲಿ, ಪೆಟ್ಟಿ ಅಂಗಡಿ, ಮೊದಲಾದ ಹಿನ್ನೆಲೆಯಿಂದ ಬಂದ ಈ ವಿದ್ಯಾರ್ಥಿಗಳ ಸಾಧನೆ ನಮ್ಮ-ನಿಮ್ಮೆಲ್ಲರಗೂ ಹೆಮ್ಮೆ ತರುವುದರ ಜೊತೆಜೊತೆಗೇ ಸಮಾಜ, ಆ ಮನೆಗಳವರನ್ನು ಗುರುತಿಸುವ ರೀತಿಯೇ ಬೇರೆಯಾಗಿಬಿಟ್ಟಿದೆ.

2024-25ರ ಸಾಲಿಗೆ ಪ್ರವೇಶ ಪ್ರಕ್ರಿಯೆ – ಪ್ರಾರಂಭವಾಗಿದೆ:

  • ಅಕ್ಟೋಬರ್ 1ಕ್ಕೆ ಪ್ರಾರಂಭವಾಗಿದ್ದು, ಡಿಸೆಂಬರ್ 10ಕ್ಕೆ ಕೊನೆಗೊಳ್ಳಲಿದೆ.
  • ತಪಸ್‍ನಲ್ಲಿ ಗಂಡುಮಕ್ಕಳಿಗೆ ಪಿಯುಸಿ ಹಾಗೂ ಐಐಟಿ-ಜೆಇಇ ತರಬೇತಿ
  • ಸಾಧನಾದಲ್ಲಿ ಹೆಣ್ಣುಮಕ್ಕಳಿಗೆ ಪಿಯುಸಿ ಹಾಗೂ ನೀಟ್/ ಶಿಕ್ಷಣ ತರಬೇತಿ
  • ಮಕ್ಕಳು 10ನೇ ತರಗತಿಯಲ್ಲಿ ಓದುತ್ತಿರಬೇಕು
  • 9ನೇ ತರಗತಿಯಲ್ಲಿ ಕನಿಷ್ಠ 85% ಅಂಕ ಪಡೆದಿರಬೇಕು
  • ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಆನ್‍ಲೈನ್‍ನಲ್ಲಿ ಅರ್ಜಿ ತುಂಬಬೇಕು – www.tapassaadhana.org
  • ಮಾಹಿತಿಗಳ ಜೊತೆಯಲ್ಲಿ 9ನೇ ತರಗತಿಯ ಅಂಕಪಟ್ಟಿ ಹಾಗೂ ವಿದ್ಯಾರ್ಥಿ/ ವಿದ್ಯಾರ್ಥಿನಿಯ ಭಾವಚಿತ್ರವನ್ನು ಅಪ್‍ಲೋಡ್ ಮಾಡಬೇಕು.
  • ರಾಜ್ಯಾದ್ಯಂತ ಇರುವ 50ಕ್ಕೂ ಹೆಚ್ಚಿನ ಪರೀಕ್ಷಾ ಕೇಂದ್ರಗಳಲ್ಲಿ, ನಿಮಗೆ ಸೂಕ್ತವೆನಿಸುವ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರದಲ್ಲಿ ಪರೀಕ್ಷಾ ಕೇಂದ್ರದ ಬದಲಾವಣೆಗೆ ಅವಕಾಶ ಇರುವುದಿಲ್ಲ.
  • ಹಾಲ್‍ಟಿಕೇಟ್, ಮಾದರಿ ಪ್ರಶ್ನೆಪತ್ರಿಕೆ ಹಾಗೂ ಇನ್ನುಳಿದ ವಿವರಗಳನ್ನು ವೆಬ್ಸೈಟ್‍ನಲ್ಲಿಯೇ ಪಡೆಯಬಹುದು.
  • ಮೊದಲ ಹಂತದ ಪ್ರವೇಶ ಪರೀಕ್ಷೆ ಡಿಸೆಂಬರ್ 25 ಹಾಗೂ ಎರಡನೇ ಹಂತದ ಪ್ರವೇಶ ಪರೀಕ್ಷೆ ಜನವರಿ 26ರಂದು ಇರಲಿದೆ.

ಸಂಸ್ಕಾರಯುತ ಮತ್ತು ರಾಷ್ಟ್ರನಿಷ್ಠ ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆ ಎಂಬುದು ರಾಷ್ಟ್ರೋತ್ಥಾನ ಪರಿಷತ್ತಿನ ಬಹುಮುಖ್ಯವಾದ ಧ್ಯೇಯ. ಆ ನಿಟ್ಟಿನಲ್ಲಿ ಸಮಾಜ ಮತ್ತು ಸೇವೆಯ ನಡುವಿನ ಕೊಂಡಿಯಾಗಿ, ಸದೃಢ ಸಮಾಜದ ನಿರ್ಮಾಣದಲ್ಲಿ ತೊಡಗಿಕೊಂಡಿರುವ ರಾಷ್ಟ್ರೋತ್ಥಾನದ ಕಾರ್ಯಗಳು ಶ್ಲಾಘನೀಯ. ಇಂಜಿನಿಯರ್ ಮತ್ತು ಡಾಕ್ಟರ್ ಆಗುವ ಬಡವರ ಕನಸು ಗಗನ ಕುಸುಮವಲ್ಲ. ಮಹತ್ವಾಕಾಂಕ್ಷೆ ಮತ್ತು ಪ್ರತಿಭೆಯಿದ್ದರೆ ಅಂಥವರ ಕನಸು ಕೂಡ ನನಸಾಗಬಲ್ಲದು ಎಂಬುದನ್ನು ‘ತಪಸ್ ಮತ್ತು ಸಾಧನಾ’ಗಳು ತೋರಿಸಿಕೊಟ್ಟಿವೆ.

ಸಂಪರ್ಕ:

94812 01144/ 94482 84615/ 98446 02529

ಹೆಚ್ಚಿನ ಮಾಹಿತಿಗೆ ಅಂತರ್ಜಾಲ ತಾಣಕ್ಕೆ ಭೇಟಿಕೊಡಿ:

www.tapassaadhana.org

Leave a Reply

Your email address will not be published. Required fields are marked *